“ಬೇರುಗಳಿಂದ” ಪ್ರಾರಂಭಗೊಂಡು…

      ಮನಮಿಡಿಯುವ ಶ್ರೇಷ್ಠ ಭಾವಗಳ ಉಗ್ರಾಣವೇ ಆಗಿರುವ ನಾಗತಿಹಳ್ಳಿ ರಮೇಶ್ರವರ ‘ಸಮುದ್ರ ಮತ್ತು ಮಳೆ’ ಕವನಗಳಲ್ಲಿ ಮಾನವೀಯ ಮೌಲ್ಯ, ಸಂಬಂಧ ಸಂಕೀರ್ಣತೆ, ಉತ್ಕಟ ಭಾವ, ನೋವು, ತುಳಿತಕ್ಕೊಳಗಾದ ಎದೆಯಾಳದ ತಾಪ ಕವಿಯ ಅನುಭವಗಳ ಅರಿವಿನ ಸಾಲುಗಳು.
          ಬದುಕು ಮತ್ತು ಸಾಹಿತ್ಯದ ದೃಷ್ಠಿಯಿಂದಲೂ ಕವನದ ಸಾಲುಗಳು ಶ್ರೇಷ್ಠವಾಗಿಯೂ, ಒಳಗೆ ಅಡಗಿರುವ ಭಾವಗಳ ಬಡಿದೆಬ್ಬಿಸುವ ಶಕ್ತಿಯನ್ನು ಹೊಂದಿದೆ. ಅತ್ಯಂತ ಸರಳ, ದೈನಂದಿನ , ಸಣ್ಣ ಪುಟ್ಟ ಬೇಡಿಕೆಗಳೆನಿಸುವುದೇ… ಮುಂದೆ ಹೆಬ್ಬಯಕೆಯಾಗಿ, ಹೃದಯಕ್ಕೆ ಹತ್ತಿರವಾಗಿ ಕೈಗೆಟುಕದಷ್ಟು ದೂರವಾಗಿ, ನೋವುಗಳ ಹೊಡೆತಕ್ಕೆ ಜರ್ಜರಿತವಾದರೂ ಈ ಕವಿ ಛಲಬಿಡದ ತ್ರಿವಿಕ್ರಮನಂತೆ ಜೀವನ ತಂದೊಡ್ಡುವ ಎಲ್ಲಾ ಸವಾಲುಗಳಿಗೆ ಸಡ್ಡು ಹೊಡೆದು ಎದೆಕೊಟ್ಟು ನಿಲ್ಲುತ್ತಾರೆ. ಇವರು ಕಟ್ಟಿಕೊಡುವ “ಅವ್ವ” ಒಬ್ಬ ಸರಳ ಸುಜ್ಞಾನಿ ಅನುಭಾವಿ ಹೆಂಗಸು, ಮಗನ ಕನಿಷ್ಠ ಬೇಡಿಕೆಗಳನ್ನಷ್ಟೆ ಪೂರೈಸಿ ಮೌನದಲ್ಲೆ ಅವನ ಬೆಳವಣಿಗೆಯನ್ನು ಕಾಣುತ್ತಾಳೆ.
          ನಿರ್ಲಕ್ಷಿಸಿರುವ ಜವಾಬ್ದಾರಿಗಳ ಹೊರೆಯನ್ನು ನಗುಮುಖದಿಂದಲೇ ಹೊತ್ತು ಹೊರುವ ಅವ್ವನ ಮಾತುಗಳು “ತತ್ವ ಪದಗಳಂತೆ” ನಾಟುತ್ತವೆ. ಅವ್ವನ ತತ್ವಪದಗಳಲ್ಲಿ ಬೆಳಕನ್ನು ಕಂಡು ಸಮಾಧಾನವನ್ನು ಉಂಡು, ತನ್ನ ಇಡೀ ಶಕ್ತಿಯನ್ನು ಒಟ್ಟುಗೂಡಿಸಿ ಓದುಗರನ್ನು ಸಮುದ್ರದ ಆಳ ಹಾಗೂ ಮಳೆಯ ಮೊರೆತದ ಅನುಭವವನ್ನು ನಮ್ಮೊಳಗಿಳಿಸುವ ಕವಿಯ ಭಾವಯಾನವನ್ನು ಮೆಚ್ಚಲೇಬೇಕು. ಕವನದ ಸಾಲುಗಳು ವಾಸ್ತವಕ್ಕೆ ಹತ್ತಿರವಾಗಿ, ಸಮುದ್ರದ ಆಳವನ್ನು, ಮಳೆಯ ಸಹಜತೆಯನ್ನು ಹೊಂದಿದೆ.
           “ಸಮುದ್ರ ಮತ್ತು ಮಳೆ” ಓದುವ ಪ್ರತಿ ಓದುಗನೂ ತನ್ನದೇ ಆದ ಆಳವನ್ನು ತಾನು ಮುಟ್ಟಿದ ಅನುಭವವಾಗುತ್ತದೆ. ಇವರ ಕವನ ಓದಿದ ನಂತರವೇ ಇವರ ಮನದಾಳದ ನಿಸ್ವಾರ್ಥ ವಿಶ್ವ ಪ್ರೇಮ, ವಿನಯಶೀಲತೆ, ಕಾಳಜಿ, ಭಾವಣಿಕೆಗಳು ಅರ್ಥವಾಗುತ್ತದೆ. ಕವನದ ಸಾಲುಗಳು “ಬೇರುಗಳಿಂದ” ಪ್ರಾರಂಭಗೊಂಡು, ವಲಸೆ ಹೋಗುವವರ ಅದ್ಭುತ ಹುಡುಕಾಟವನ್ನು, ಒಳಗೊಳಗೇ ಸೀಳುವ ಖಾಲಿತನವನ್ನು, ನಾಗರಿಕತೆಯ ಪಿಡುಗುಗಳನ್ನು, ಪಾಶ್ಚಿಮಾತ್ಯದ ಟೊಳ್ಳುತನವನ್ನು, ಗುರಿ ಇಲ್ಲದ ಹುಡುಕಾಟಗಳ ಕೊನೆಗಾಣದ ಮರೀಚಿಕೆಯಾಗಿ, ಕನಸು ಮತ್ತು ವಾಸ್ತವಗಳ ಪರಿಭಾವವನ್ನು ಉತ್ಕಟತೆಯಿಂದ ಕಟ್ಟಿಕೊಡುತ್ತದೆ. ಇತಿಹಾಸದಿಂದಲೂ ಭೂಮಿಯನ್ನಾಳಿದವರು ತಮ್ಮ ಸ್ವಾರ್ಥ ಸಾಧನೆಗಾಗಿ, ದುರಾಸೆಯ ಫಲದಿಂದ, ಪ್ರಕೃತಿಯನ್ನು ನಿರ್ಲಕ್ಷಿಸಿ, ಈ ಭೂಮಿಯನ್ನು ಉರಿಯುವ ಕುಲುಮೆಯನ್ನಾಗಿಸಲು ಕಾದಾಡಿದರು. ಎರಡು ಮಹಾ ಯುದ್ಧಗಳು, ಸಿಡಿಗುಂಡು ಅಣುಬಾಂಬ್ಗಳು, ಯುದ್ಧದ ನಂತರದ ಮಾನವನ ಸಣ್ಣತನದ ಲೆಕ್ಕಾಚಾರಗಳು, ಉರಿಯುವ ಸಮಸ್ಯೆಗಳ ಬಗೆಗಿನ ಮಾನವನ ನಿರ್ಲಜ್ಜ- ನಿರ್ಲಕ್ಷತೆಗಳು, ಭೂಮಿಯನ್ನು ವಿನಾಶದ ಅಂಚಿಗೆ ಕೊಂಡೊಯ್ಯುವ ಮಾನವನ ಸ್ವಾರ್ಥವನ್ನು ಕವನದ ಸಾಲುಗಳು ಕೂಗಿ ಹೇಳುತ್ತವೆ. ಇದನ್ನು ಓದಿದವರಿಗೆ ಮಾನವನ ಈ ನೀಚಗುಣಗಳ ಬಗ್ಗೆ ಸಂಕಟ, ಕೋಪ ಉಂಟಾಗುತ್ತದೆ.
           ಓದುಗರ ಮೇಲೆ ತೀಕ್ಷ್ಣವಾದ ಅಚ್ಚಳಿಯದ ಪರಿಣಾಮವನ್ನು ಉಂಟು ಮಾಡುವ ‘ಸಮುದ್ರ ಮತ್ತು ಮಳೆ’ ಒಂದು ಅದ್ಭುತ ಸೃಷ್ಠಿಯೇ ಸರಿ, ಈ ಕವನ ಸಂಕಲನವನ್ನು ಅಂಕುರ್ ಬೆಟಗೇರಿಯವರು ಆಂಗ್ಲ ಭಾಷೆಗೂ ಅನುವಾದಿಸಿದ್ದಾರೆ. ಆದರೆ ಮೂಲ ಕೃತಿಯ ಸೊಗಡನ್ನು ಸಾಂಸ್ಕೃತಿಕ ಸೊಬಗನ್ನು ಮೂಲಭಾಷೆಯಾದ ಕನ್ನಡದಲ್ಲೇ ಓದಿಯೇ ತೀರಬೇಕು. ಇಂತಹ ಒಂದು ಒಳ್ಳೆಯ ಓದನ್ನು ಒದಗಿಸಿಕೊಟ್ಟ ರಮೇಶ್ರವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು.
                                                         

                                                                                                ಅನುರಾಧ ದಿವಾಕರ್,
                                                                                                 ಆಂಗ್ಲ ಪ್ರಾಧ್ಯಾಪಕರು,

Advertisement

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.